Photos : Stanly Bantwal

May 5 : ಜೀವನದಲ್ಲಿ ಸಾಮಾನ್ಯವಾಗಿ ಒಂದೇ ಬಾರಿ ಜರುಗುವ ವಿವಾಹವೆಂಬ ಅತ್ಯಂತ ಪ್ರಮುಖವಾದ ಮತ್ತು ಪವಿತ್ರವಾದ ಸಂಸ್ಕಾರವನ್ನು ಅತೀ ವೈಭವದಿಂದ ಮತ್ತು ಸಂಭ್ರಮದಿಂದ ಆಚರಿಸಬೇಕೆಂಬ ಹಂಬಲವು ಬಹುತೇಕ ಮಂದಿಯಲ್ಲಿ ಇರುತ್ತದೆ. ಆದರೆ ಇದಕ್ಕೆ ತಗಲುವ ವಿಪರೀತ ಖರ್ಚಿನಿಂದ ಎಷ್ಟೊ ಮಂದಿಗೆ ಇದೊಂದು ಜೀವನ ಪರ್ಯಂತ ಮರೆಯಲಾಗದ ದುಃಸ್ವಪ್ನವಾಗಿ ಪರಿಣಮಿಸಿದ್ದು ಇದೆ. ವಿವಾಹಕ್ಕೋಸ್ಕರ ಮಾಡಿದ ಸಾಲ ಹೊರೆಯಡಿ ಸಿಲುಕಿ ಜೀವನವಿಡೀ ಕಣ್ಣೀರಿನಲಿ, ತಮ್ಮ ಬಾಳನ್ನು ತೇಯ್ದ ಕುಟುಂಬಗಳು ಅದೆಷ್ಟೋ. ಬಡತನದ ಬೇಗೆಯಿಂದ ವಿವಾಹವೆಂಬುದು ಕನಸಿನ ಮಾತಾಗಿ, ವಿವಾಹವಾಗದೇ ಉಳಿದು ಸಮಾಜದ ಕ್ರೂರದೃಷ್ಟಿಗೆ ಸಿಲುಕಿ ತಮ್ಮ ಬಾಳನ್ನು ಕಳಕೊಂಡ ನತದೃಷ್ಟ ಕನ್ಯೆಯರು ಅದೆಷ್ಟೋ ಮಂದಿ. ಮದುವೆ ಮಾಡಿ ನೋಡು ಮನೆ ಕಟ್ಟಿನೋಡು ಎಂಬ ನಾಣ್ಣುಡಿಯು, ಇದೊಂದು ದೊಡ್ಡ ಸಾಮಾಜಿಕ ಸಮಸ್ಯೆಯೆಂದು ತಿಳಿಹೇಳುತ್ತದೆ. ಆದರೆ ಕಳೆದ ಹಲವಾರು ವರುಷಗಳಿಂದ ನಮ್ಮ ಸಮಾಜದಲ್ಲಿ ಜರುಗುತ್ತಿರುವ ಸಾಮೂಹಿಕ ವಿವಾಹಗಳು ಇಂತಹ ನತದೃಷ್ಟರಿಗೆ ನಿಜವಾಗಿಯೂ ಒಂದು ವರದಾನವಾಗಿ ಪರಿಣಮಿಸಿದೆ.
ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಕ್ರೈಸ್ತ ಬಾಂಧವರೂ, ತಮ್ಮ ಸಮಾಜಕ್ಕೋಸ್ಕರ ಇಂತಹ ಪುಣ್ಯಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ 44 ವರ್ಷಗಳಿಂದ ಅವರು ಯಶಸ್ವಿಯಾಗಿ ನಡೆಸಿಕೊಂದು ಬರುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ.

ಮಂಗಳೂರು ರೊಸಾರಿಯೊ ಚರ್ಚಿನಲ್ಲಿ ಸಾಮೂಹಿಕ ವಿವಾಹಗಳು

1976ರಲ್ಲಿ ಮಂಗಳೂರಿನ ರೊಸಾರಿಯೊ ಕಾಥೆದ್ರಾಲ್ ಇಗರ್ಜಿಯ ಸಂತ ವಿನ್ಸೆಂಟ್ ದೆ ಪಾವ್ಲ್ ಸಭೆಯು ತನ್ನ ಸ್ವರ್ಣ ಮಹೋತ್ಸವವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿತು. ಈ ಸಂದರ್ಭದಲ್ಲಿ ಅಂದಿನ ಮಂಗಳೂರು ಕ್ರೈಸ್ತ ಕಥೋಲಿಕ್ ಸಮಾಜಕ್ಕೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಬಡವ ಬಲ್ಲಿದರಿಗೆ ದೀರ್ಘಕಾಲಿಕವಾಗಿ ಪ್ರಯೋಜನ ಬೀಳುವಂತಹ ಯಾವುದಾದರೂ ಒಂದು ವಿಶೇಷ ಕಾರ್ಯಯೋಜನೆಯನ್ನು ಆಚರಣೆಯ ಪ್ರಮುಖ ಅಂಗವಾಗಿ ಕೈಗೊಳ್ಳಲು ತೀರ್ಮಾನವಾಯಿತು.

ಈ ದಿಶೆಯಲ್ಲಿ ರೊಸಾರಿಯೊ ಕಾಥೆದ್ರಾಲ್ ಚರ್ಚಿನ ಧರ್ಮಗುರುಗಳಾಗಿದ್ದ ವಂದನೀಯ ಫ್ರೆಡ್ ವಿ ಪಿರೇರಾ ಮತ್ತು ಸಹಾಯಕ ಧರ್ಮಗುರುಗಳಾಗಿದ್ದ ವಂದನೀಯ ಡೆನಿಸ್ ಕಾಸ್ತೆಲಿನೊ ಇವರ ಗಂಭೀರ ಚಿಂತನೆಯ ಫಲವಾಗಿ ಮಂಗಳೂರು ಧರ್ಮಪ್ರಾಂತ್ಯದ ಮಟ್ಟದಲ್ಲಿ ‘ಉಚಿತ ಸಾಮೂಹಿಕ ವಿವಾಹ ಕಾರ್ಯಯೋಜನೆಯು ಜನ್ಮವೆತ್ತಿತು.

ಉಚಿತ ಸಾಮೂಹಿಕ ವಿವಾಹಗಳ ಉದ್ದೇಶ

ಆರ್ಥಿಕವಾಗಿ ಅಡಚಣೆಯುಳ್ಳವರಿಗೆ ಮತ್ತು ಬಡವರಿಗೆ ಖರ್ಚನ್ನು ಕಡಿಮೆ ಮಾಡಿ ವಿವಾಹವೆಂಬ ಪವಿತ್ರ ಸಂಸ್ಕಾರವನ್ನು ಪಡೆಯಲು ಅನುವು ಮಾಡಿ ಕೊಡುವುದೇ ಈ ಕಾರ್ಯಯೋಜನೆಗಳ ಪ್ರಮುಖ ಉದ್ದೇಶ.

ಸಂಭ್ರಮದ ಅಧ್ಯಕ್ಷತೆ: ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಧರ್ಮಾಧ್ಯಕ್ಷರು ಮಂಗಳೂರು ಧರ್ಮಪ್ರಾಂತ್ಯ
ಮುಖ್ಯ ಅತಿಥಿ: ಶ್ರೀಮಾನ್ ಐವನ್ ಫೆರ್ನಾಂಡಿಸ್ , ಅನಿವಾಸಿ ಉದ್ಯಮಿ
ಉಪಸ್ಥಿತಿ: ವಂದನೀಯ ಜೆ.ಬಿ. ಕ್ರಾಸ್ತಾ, ಶ್ರೀಮಾನ್ ಸಿ ಜೆ ಸೈಮನ್, ಶ್ರೀಮತಿ ಮೇರಿ ಪಿಂಟೊ ಹಾಗೂ ಸದಸ್ಯರು